ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿ ಸನ್ನಿದಿಯಲ್ಲಿ ನಡೆದ ಪವಾಡ
ಕಳೆದ 7 ತಿಂಗಳಿಂದ ಅಪರೂಪದ ಆಟೋ ಇಮ್ಯೂನ್ ಸಮಸ್ಯೆಗೆ ಒಳಗಾಗಿ ಕೈಕಾಲುಗಳ ಸ್ವಾಧೀನವನ್ನೇ ಕಳೆದುಕೊಂಡಿದ್ದ ಎಂಬಿಬಿಎಸ್ ವಿದ್ಯಾರ್ಥಿನಿಯೊಬ್ಬಳು, ಗುರು ರಾಘವೇಂದ್ರ ಸ್ವಾಮಿಗಳ ಅನುಗ್ರಹದಿಂದ ಸಂಪೂರ್ಣ ಗುಣಮುಖಳಾಗಿ ವೀಲ್ಚೇರ್ ತೊರೆದು ಮೊದಲಿನಂತೆ ನಡೆದಾಡುತ್ತಿರುವ ಘಟನೆ ಹಾವೇರಿ (Haveri) ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.ಹಾವೇರಿ ತಾಲೂಕಿನ ನೆಗಳೂರು ಗ್ರಾಮದ ನಿವಾಸಿ 22 ವರ್ಷದ ನಿವೇದಿತಾ ಶಿವಪ್ಪ ನೆಗಳೂರು ಗುಣಮುಖರಾದ ಯುವತಿ.
ನಡೆದಿದ್ದೇನು?
ವಿಜ್ಞಾನ ಮತ್ತು ತಂತ್ರಜ್ಞಾನ ಎಷ್ಟೇ ಮುಂದುವರೆದರೂ ವಿಸ್ಮಯ ಪವಾಡಗಳು ಆಗಾಗ ನಡೆಯುತ್ತವೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿ ಆಗಿದೆ. ಕಳೆದ 7 ತಿಂಗಳ ಹಿಂದೆ ಹಾವೇರಿ ತಾಲೂಕಿನ ನೆಗಳೂರು ಗ್ರಾಮದ ನಿವಾಸಿ ನಿವೇದಿತಾ ಅಪರೂಪದ ಅನಾರೋಗ್ಯದಿಂದ ಬಳಲುತ್ತಿದ್ದರು. ಪದೇ ಪದೇ ಮೂರ್ಚೆ ಹೋಗುವ ಸಮಸ್ಯೆ ಕಾಣಿಸಿಕೊಳ್ಳುತ್ತಿತ್ತು. ದಿನದಿಂದ ದಿನಕ್ಕೆ ಆರೋಗ್ಯ ಸ್ಥಿತಿ ಹದಗೆಟ್ಟು, ಕೈ-ಕಾಲುಗಳ ಸ್ವಾಧೀನ ಹೋಗಿ ವೀಲ್ಚೇರ್ ಆಶ್ರಯಿಸಬೇಕಾಯಿತು.
ಅಪರೂಪದ ಸಮಸ್ಯೆಗೆ ಗುರಿಯಾಗಿದ್ದ ಯುವತಿ
ಇನ್ನು ಈ ಅಪರೂಪದ ಸಮಸ್ಯೆ ಬಗ್ಗೆ ಪರೀಕ್ಷಿಸಿದಾಗ ನಿವೇದಿತಾಗೆ ಆಟೋ ಇಮ್ಯೂನ್ ಸಮಸ್ಯೆಯಿಂದ ಉಂಟಾದ ಆ್ಯಂಟಿ ಬಾಡಿ ಮೆದುಳಿನ ಮೇಲೆ ಪರಿಣಾಮ ಬೀರುತ್ತಿರುವುದು ಪತ್ತೆಯಾಗಿದೆ. ಕುಟುಂಬಸ್ಥರು ಹಾವೇರಿಯ ಖಾಸಗಿ ಆಸ್ಪತ್ರೆ ಸೇರಿದಂತೆ ಹುಬ್ಬಳ್ಳಿಯ ಹಲವು ಪ್ರತಿಷ್ಠಿತ ಆಸ್ಪತ್ರೆಗಳಿಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರೂ ನಿರೀಕ್ಷಿತ ಚೇತರಿಕೆ ಕಂಡುಬರಲಿಲ್ಲ. ಸುಮಾರು ಐದಾರು ಲಕ್ಷ ರೂ ಹಣ ಆಸ್ಪತ್ರೆಗೆ ಖರ್ಚು ಮಾಡಿದ್ದಾರೆ. ಅದರೂ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡುಬಂದಿಲ್ಲ. ಆದರೂ ವೈದ್ಯರ ಸಲಹೆ ಮತ್ತು ಚಿಕಿತ್ಸೆ ಪಡೆಯುತ್ತಾ ನಿವೇದಿತಾ ಮನೆಯಲ್ಲಿ ಕಾಲ ಕಳೆಯುತ್ತಿದ್ದಳು.
ಆಗ ನಡೆದಿದ್ದೇ ರಾಯರ ಪವಾಡ.ನಿವೇದಿತಾ ಮನೆಯವರು ರಾಯರ ಮಠಕ್ಕೆ ಬರುತ್ತಿದ್ದರು. ಅದರಂತೆ ಮಠಕ್ಕೆ ಕರೆದುಕೊಂಡು ಬರಲು ನಿರ್ಧಾರ ಮಾಡಿದ್ದರು. ನಿವೇದಿತಾ ಒಲ್ಲದ ಮನಸ್ಸಿನಿಂದ ಹೊಸರಿತ್ತಿ ರಾಯರ ಮಠಕ್ಕೆ ಬಂದಿದ್ದಾರೆ. ಅದೇ ವೇಳೆಯಲ್ಲಿ 100ನೇ ಸುಶೀಲೇಂದ್ರತಿರ್ಥ ಆರಾಧನೆಯ ಕಾರ್ಯಕ್ರಮಕ್ಕೆ ಸುಭುದೇಂದ್ರ ತೀರ್ಥ ಸ್ವಾಮೀಜಿ ಆಗಮಿಸಿದ್ದರು. ಈ ವೇಳೆ ನಿವೇದಿತಾ ಕುಟುಂಬಸ್ಥರು ಆಕೆಯನ್ನು ಸ್ವಾಮೀಜಿಗಳ ಬಳಿ ಕರೆದೊಯ್ದಿದ್ದರು. ರಾಯರ ಮಂತ್ರಾಕ್ಷತೆ ಹಾಗೂ ಭಾವಚಿತ್ರವನ್ನು ನೀಡಿ, ಐದು ವಾರಗಳ ಕಾಲ ರಾಯರ ಮಠಕ್ಕೆ ನಡೆದುಕೊಳ್ಳುವಂತೆ ಸಲಹೆ ನೀಡಿದ್ದರು.
ಅದೊಂದು ದಿನ ನಡೆಯಿತು ಅಚ್ಚರಿ
ಸ್ವಾಮೀಜಿಗಳ ಸಲಹೆಯಂತೆ ನಡೆದುಕೊಳ್ಳುತ್ತಿರುವಾಗ ಒಂದು ಅಚ್ಚರಿ ನಡೆದಿದೆ. ಮೂರು ವಾರದಲ್ಲೇ ನಿವೇದಿತಾ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಐದು ವಾರಗಳ ಹರಕೆಯ ನಂತರ ಇದೀಗ ಸ್ವತಃ ನಿವೇದಿತಾ ಓಡಾಡುತ್ತಿದ್ದು, ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಕಂಡುಬಂದಿದೆ ಎಂದು ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.ಅಲ್ಲದೇ ರಾಯರಮಠದಿಂದಲೇ ಸುಭುಂದ್ರತಿರ್ಥರಿಗೆ ಕರೆ ಮಾಡಿ ವಿಷಯವನ್ನ ತಿಳಿಸಿದ್ದಾರೆ. ಅವರು ಮಂತ್ರಾಲಯಕ್ಕೆ ಬನ್ನಿ, ರಾಯರು ನಿಮಗೆ ಒಳ್ಳೆಯದು ಮಾಡುತ್ತಾರೆ ಎಂದಿದ್ದಾರೆ. ಮಗಳ ಆರೋಗ್ಯ ಸ್ಥಿತಿ ನೋಡಿ ಆತಂಕದಲ್ಲಿದ್ದ ಕುಟುಂಬಕ್ಕೆ ಇದೀಗ ನೆಮ್ಮದಿ ಸಿಕ್ಕಿದೆ. ನಿವೇದಿತಾಳ ಚೇತರಿಕೆಯನ್ನು ಕುಟುಂಬಸ್ಥರು ರಾಯರ ಕೃಪೆ ಮತ್ತು ಆಶೀರ್ವಾದ ಎಂದು ನಂಬಿದ್ದಾರೆ. ಲಕ್ಷಾಂತರ ರೂಪಾಯಿ ವೆಚ್ಚ ಮಾಡಿದರೂ ಗುಣವಾಗದ ಕಾಯಿಲೆ ರಾಯರ ಪಾದಸೇವೆಯಿಂದ ಗುಣಮುಖವಾಗಿದ್ದು, ಕುಟುಂಬಸ್ಥರು ಇದು ರಾಯರ ಪವಾಡವೇ ಎಂದು ಭಾವಿಸಿದ್ದಾರೆ.

